RCB ಜೊತೆ ಕೊಹ್ಲಿಯ ಭಾವನಾತ್ಮಕ ನಿಲುವು ಒಂದು ಮಾದರಿಯೇ?
RCB... RCB... RCB... ಕೋಟ್ಯಂತರ ಜನಗಳ ಅಣು ಅಣುವಿನಲ್ಲೂ ಕಣ ಕಣದಲ್ಲೂ RCB.
ಹದಿನೆಂಟು ವರ್ಷಗಳಲ್ಲಿ RCB ತಂಡದ ಹಲವಾರು ಆಟಗಾರರ ಮಿತಿಮೀರಿದ ಪ್ರಯತ್ನಗಳು, ಎಡವಟ್ಟುಗಳು, ಅನುಭವಗಳು, ಸೋಲುಗಳು, ನೋವುಗಳು, ನಿರಾಷೆಗಳು. ಸ್ಪರ್ಧಾತ್ಮಕ ಕ್ರೀಡೆ ಎಂದ ಮೇಲೆ ಇವೆಲ್ಲವೂ ಸರ್ವೇ ಸಾಮಾನ್ಯವೇ.
ಪ್ರತಿ ಬಾರಿ ಸೋತಾಗಲು "RCB ಗೆ ಚಿಪ್ಪು ಲಾಲಿಪಪ್ಪು" ಎಂದು ಕೇವಲವಾಗಿ ಗೇಲಿ ಮಾಡಿದಾಗಲೂ, ಉದಾರ ಮನಸ್ಸಿನಿಂದ "ಪರವಾಗಿಲ್ಲ ಬಿಡಿ... ಮುಂದಿನ ಸಲ ಕಪ್ ನಮ್ದೇ" ಅಂತ ಹೇಳಿಕೊಂಡು ಸಮಾಧಾನ ಪಡುತ್ತಿದ್ದೆವು. ಅದೇ ರೀತಿ ಈ ಬಾರಿಯೂ ಗೆಲ್ಲದಿದ್ದರೆ ಅಷ್ಟು ಸುಲಭವಾಗಿ ನಾವು ಹೇಳಲು ಸಾಧ್ಯವಿತ್ತೇ?
ಖಂಡಿತವಾಗಿಯೂ ಇಲ್ಲ. RCB ತಂಡ ಈಗ ಅಲ್ಲದಿದ್ದರೆ ಮುಂದೆ ಯಾವಾಗಲೋ ಒಂದು ಸರ್ತಿ ಗೆಲ್ಲಬಹುದಿತ್ತು. ಆದರೆ, ಈ ಬಾರಿ ಗೆಲುವು ಬೇಕೇ ಬೇಕು ಎಂದು ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತಿದ್ದರು. ಈ ಆಶಯ ಕೇವಲ RCB ತಂಡದ ಮೇಲಿನ ಅಭಿಮಾನ ಮಾತ್ರವಲ್ಲ, ಒಂದು ವ್ಯಕ್ತಿತ್ವಕ್ಕಾಗಿ ಕೂಡ.
ಒಮ್ಮೆಯಾದರೂ "ಈ ಸಲ ಕಪ್ ನಮ್ದು" ಎಂದು ಉದ್ಘರಿಸಿ ಮುತ್ತಿಡಬೇಕು ಎಂದು 18 ವರ್ಷಗಳ ಕಾಲ ತಂಡದೊಂದಿಗೆ ಬಂಡೆಯಾಗಿ ನಿಂತದ್ದ ಏಕೈಕ ವ್ಯಕ್ತಿ ವಿರಾಟ್ ಕೋಹ್ಲಿ.
ಹೌದು, ಪ್ರತಿ ವರ್ಷ ಈತನಿಗೆ ಗೆಲುವಿನ-ಕುದುರೆ ಏರುವ ಅವಕಾಶವಿದ್ದರೂ ಬೇರೆ ಯಾವುದೇ ತಂಡಕ್ಕೆ ಹೋಗದೆ ಭಾವನಾತ್ಮಕವಾಗಿ ನಾಡಿನ ಜನತೆಯೊಂದಿಗೆ ಬೆರೆತಿದ್ದ ಈ ವ್ಯಕ್ತಿ ಸಮಾಜಕ್ಕೆ ಒಂದು ಮಾದರಿಯೇ ಸರಿ.
ಲಾಭ-ನಷ್ಟ, ಸೋಲು-ಗೆಲುವು, ಪ್ರಶಸ್ತಿ-ಪ್ರಶಂಸೆ ಇಂತವುಗಳ ದುಂಬಾಲು ಬಿದ್ದಿರುವ ಮನುಷ್ಯ ಜೀವನದಲ್ಲಿ ಭಾವನಾತ್ಮಕ, ಅಚಲತೆ, ದೃಢ-ಸಂಕಲ್ಪ ಗುಣಗಳು ಮರೀಚಿಕೆಯಾಗಿವೆ. ಇಂತಹ ಸಮಯದಲ್ಲಿ ಈ ತರದ ವ್ಯಕ್ತಿತ್ವಗಳು ಕಾಣಸಿಗುವುದು ಬಲು ಅಪರೂಪ.
My Heart and Soul is with Bengaluru.
RCB fans are ROYAL in LOYAL.
Anushka is from Bengaluru, she is more happy.
ಈ ಸಲ ಕಪ್ ನಮ್ದು.
ಈ ಮೇಲಿನ ಮಾತುಗಳು ವಿರಾಟ್ ಕೊಹ್ಲಿ ಪಂದ್ಯ ಮುಗಿದ ನಂತರ ಮೈದಾನದಲ್ಲಿ ಭಾವನಾತ್ಮಕವಾಗಿ ಹೇಳಿದ ಮಾತುಗಳು. ಕೆಲವು ಪ್ರಸಿದ್ಧ ವ್ಯಕ್ತಿಗಳು ಈ ನಾಡಿನಲ್ಲಿ ಹುಟ್ಟಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವವರು ಕೂಡ ತನ್ನ ತಾಯ್ನಾಡಿನ ಬಗ್ಗೆ ಇಷ್ಟು ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ಇಂಥವರುಗಳ ಮಧ್ಯೆ ವಿರಾಟ್ ಕೊಹ್ಲಿಯ ಈ ನಿಷ್ಠೆ ಮತ್ತು ಅಭಿಮಾನದ ಮಾತುಗಳು ಕೇಳಿದರೆ ಅವರ ಮೇಲಿನ ಗೌರವ ಹೆಚ್ಚಾಗುತ್ತೆ.
ಈ ಗೆಲುವಿಗೆ ಕಾರಣ ಎಲ್ಲರ ಪ್ರರಿಶ್ರಮ, ಶ್ರದ್ಧೆ, ನಿಷ್ಠೆಯಿಂದ ದಕ್ಕಿದೆಯಾದರೂ ಗೆಲುವಿನ ಅರ್ಪಣೆ ಈ ವಿಶಿಷ್ಟ ಮಾದರಿಯ ವ್ಯಕ್ತಿತ್ವಕ್ಕೂ ಕೂಡ ಸಲ್ಲತಕ್ಕದ್ದು ಎಂಬುದು ನನ್ನ ಅಭಿಪ್ರಾಯ.
- ರಾಘವೇಂದ್ರ. ಜಿ. ಶ್ರೀರಾಮಯ್ಯ
Comments
Post a Comment
ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ