ಸಾರ್ಥಕ ನಿವಾಸ

ದಂಪತಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಕೂಡಿದ್ದ ಚಿಕ್ಕ ಸಂಸಾರವದು. ಕಡು ಬಡತನದ ಬೇಗುದಿಯಲ್ಲಿ ಬೆಂದೆದ್ದು ಹಾಗೋ ಹೀಗೋ ಸಾಗುತ್ತಿದ್ದ ಜೀವನ. ಸಂಸಾರದ ಅತ್ಯಲ್ಪ ಅವಧಿಯಲ್ಲಿ ಪತಿಯ ಅಕಾಲಿಕ ಮರಣವೆಂಬ ಆಘಾತ. ಪರಿಣಾಮ, ತನ್ನೆರೆಡು ಚಿಕ್ಕ ಮಕ್ಕಳ ಪೋಷಣೆಯ ಸಂಪೂರ್ಣ ಜವಾಬ್ಧಾರಿ ತಾಯಿಯ ಹೆಗಲೇರಿತು. ಸ್ವಂತ ಮನೆಯಿಲ್ಲ, ನನ್ನವರು ತನ್ನವರು ಎಂಬುವರಿಲ್ಲ, ಕಷ್ಟ ಕಾರ್ಪಣ್ಯಗಳ ಸಾಲು ಸಾಲು ಸರಮಾಲೆ. ಬಾಲ್ಯದಲ್ಲಿ ಬೇಕು-ಬೇಡಗಳ ಬಯಕೆಗಳನ್ನು ಬದಿಗಿರಿಸಿ ಬದುಕುತ್ತಿದ್ದ ಮಕ್ಕಳು ಒಂದು ಕಡೆ.

ಹೇಗೋ ಕಷ್ಟ ಪಟ್ಟು ಮಕ್ಕಳನ್ನ ಎದೆ ಎತ್ತರಕ್ಕೆ ಬೆಳೆಸಿ, ಅವಶ್ಯಕ ವಿದ್ಯಾಭ್ಯಾಸದ ಅನುವು ಮಾಡಿ, ಮಗಳ ಮದುವೆ ಮತ್ತು ಮಗನಿಗೆ ಜೀವನ ಮಾರ್ಗ ತೋರಿಸಿಕೊಟ್ಟ ತಾಯಿಯ ಶ್ರಮ ಮೆಚ್ಚಲೇಬೇಕು. ಮಗ ಒಳ್ಳೆಯ ಕೆಲಸಕ್ಕೆ ಸೇರಿ ತನ್ನ ಕಾಲ ಮೇಲೆ ತಾನು ನಿಲ್ಲುವಂತಾದರೆ ಸಾಕು ಎಂಬ ಹಿತ ಹಾರೈಕೆಯ ನಿಸ್ವಾರ್ಥ ಆಶಯ ಮಾತ್ರ ಆ ತಾಯಿಯದು.

ಮತ್ತೊಂದೆಡೆ, "ಸ್ವಂತ ಮನೆ" ಎಂಬ ಗುಲಗಂಜಿ ಆಸೆ ಅಥವಾ ಕಲ್ಪನೆಯೂ ಇಲ್ಲದ ತನ್ನ ತಾಯಿ ಸಣ್ಣ ಪುಟ್ಟ ಬಾಡಿಗೆ ಮನೆಗಳಲ್ಲಿಯೇ ಜೀವನದ ಬಂಡಿ ಸಾಗಿಸಿದ ದೃಶ್ಯ ಮತ್ತು ತಾಯಿಯ ಎಲ್ಲಾ ಕಷ್ಟಗಳನ್ನು ಬಾಲ್ಯದಿಂದ ಮೂಖನಂತೆ ನೋಡಿಕೊಂಡು ಬೆಳೆದಿರುವ ಮಗನಿಗೆ ತಾನು ಒಂದು ಮನೆ ಕಟ್ಟಿ "ಅಮ್ಮಾ... ಇದು ನಿನ್ನ ಸ್ವಂತ ಮನೆ..." ಎಂದು ಹೇಳಿ, ಒಂದು ದಿನವಾದರೂ ನನ್ನಮ್ಮನನ್ನು ಸ್ವಂತ ಮನೆಯಲ್ಲಿ ಇರಿಸುವ ಇರಾದೆ ಆ ಮಗನಿಗೆ. ತಾನು ಹುಟ್ಟಿನಿಂದಲೂ ಬಾಡಿಗೆ ಮನೆಗಳಲ್ಲಿ ಬದುಕಿರುವ ಇವನಿಗೆ ಜೀವನದಲ್ಲಿ ಒಂದು ದಿನವಾದರೂ ಸ್ವಂತ ನಿ'ವಾಸ'ದಲ್ಲಿ ವಾಸ ಮಾಡಬೇಕೆಂಬ ಹೆಬ್ಬಯಕೆ ಕೂಡ.

ತಾನು ಕೆಲಸಕ್ಕೆ ಸೇರಿದ ದಿನದಿಂದ "ಸ್ವಂತ ಮನೆ" ಯ ಅಚಲ ಗುರಿಯಲ್ಲಿದ್ದ ಇವನು, 15 ವರ್ಷಗಳ ನಿರಂತರ ಪರಿಶ್ರಮದಿಂದ ಬೆಂಗಳೂರಿನಲ್ಲಿ 30x40 ಖಾಲಿ ನಿವೇಶನ ಖರೀದಿಸಿದ. ದೈವ ಇಚ್ಛೆ, ಗುರು ಹಿರಿಯರ ಆಶೀರ್ವಾದವೋ ಏನೋ ಯಾವ ಅಡಕು ತೊಡಕಿಲ್ಲದೆ ಒಂದು ಅದ್ಬುತ ಆಕರ್ಷಕ ಮನೆಯೂ ಸಹ ನಿರ್ಮಾಣ ಮಾಡಿದ.

ಗೃಹಪ್ರವೇಶಕ್ಕೆ ಸಿಂಗಾರಗೊಂಡಿರುವ ಮನೆಗೆ ಹಿಂದಿನ ದಿನ ಸಂಜೆ ತನ್ನ ತಾಯಿಯನ್ನು ಕೈ ಹಿಡಿದು ಕರೆತಂದು "ಅಮ್ಮಾ... ನೋಡು ಇದು ನಿನ್ನ ಸ್ವಂತ ಮನೆ..." ಎಂದು ಗರ್ವದಿಂದ ಹೇಳಿದ. ಹಿರಿ ವಯಸ್ಸಿನ ತಾಯಿ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ 'ವಿ'ನೂತನ ಮನೆಯಲ್ಲೆಲ್ಲಾ ಸುತ್ತಾಡಿ ಭಾವುಕರಾಗಿ ಮಗನ ಗದ್ದ ಸವರಿ, ಒಂದು ಮುತ್ತಿಟ್ಟು "ಸಾರ್ಥಕವಾಯಿತು ಕಣಪ್ಪಾ..." ಎಂದು ಆನಂದಬಾಷ್ಪ ಸುರಿಸಿ "ಚೆನ್ನಾಗಿರು ಮಗ..." ಎಂದು ತುಂಬು ಹೃದಯದಿಂದ ಆಶೀರ್ವಾದ ಮಾಡಿ ಸಂತೋಷ ಪಟ್ಟರು. ತನ್ನ ತಾಯಿಯ ಸಂತೋಷ ಕಂಡ ಮಗನಿಗೆ ಧನ್ಯತೆಯ ಕಣ್ಣೀರು. 38 ವರ್ಷಗಳ ಬಳಿಕ ಸ್ವಂತ ಮನೆಯಲ್ಲಿ ಮೊದಲನೇ ಬಾರಿ ನೆಮ್ಮದಿ ನಿದ್ರೆಗೆ ಜಾರಿದ ಅನುಭವ ಮಗನಿಗೆ.

ಅವರಿಬ್ಬರ ಜೀವದಲ್ಲಿ ಸಾರ್ಥಕ ಕ್ಷಣಕ್ಕೆ ಕಾರಣವಾದ "ಸಾರ್ಥಕ 🏠 ನಿವಾಸ" ದಲ್ಲಿ ಸದಾಕಾಲ ಪ್ರೀತಿ, ಸಂತೋಷ ಮತ್ತು ಆರೋಗ್ಯ ತುಂಬಿರಲಿ ಎಂಬುದು ಹಿತೈಷಿಗಳ ಆಶಯ.


ರಾಘವೇಂದ್ರ. ಜಿ. ಶ್ರೀರಾಮಯ್ಯ 
anisike-abhipraya.com                 9060660060

Comments

  1. Manjunath ChickmathMarch 29, 2023 at 9:31 PM

    idu yellera kanasu, it remembers our own and friends situations which we have gone though, nice article Raghavendra

    ReplyDelete
  2. Really heart touching Raghavendra 👏👏

    ReplyDelete
  3. ನಿಜ sir.... ನಾನು ತುಂಬಾ ಹತ್ತಿರದಿಂದ ನೋಡಿರುವ ಸಾರ್ಥಕ ಜೀವಗಳು. ನಿಸ್ವಾರ್ಥ ಮನಸುಗಳು.

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಹೇಗಿದ್ದಾರೆ ಮೇಷ್ಟ್ರು..?