ಹೇಗಿದ್ದಾರೆ ಮೇಷ್ಟ್ರು..?

ಶಾಲೆಯಲ್ಲಿ ವಿದ್ಯೆ ಕಲಿಸಿದ ಗುರುಗಳನ್ನ ಸಾಮಾನ್ಯವಾಗಿ ವಿದ್ಯಾರ್ಥಿ ಜೀವನಕ್ಕೆ ಮಾತ್ರ ಸೀಮಿತವಿಡುತ್ತೇವೆ. ಅಭ್ಯಾಸವಧಿಯ ನಂತರ ಶಿಕ್ಷಕರನ್ನು ಮರೆತುಬಿಡುವುದು ಲೋಕರೂಡಿಯಾಗಿದೆ.
.
ಹೌದು, ದಿನನಿತ್ಯ ಜೀವನದ ಹಲವಾರು ಪ್ರಸಂಗಗಳಲ್ಲಿ ಹಾಗೂ ಕಷ್ಟ ಕಾರ್ಪಣ್ಯಗಳ ನಡುವೆ ನಮಗೆ ಸಲಹೆ-ಸೂಚನೆಗಳು, ಮಾರ್ಗದರ್ಶನ ಬೇಕೆನಿಸಿದ್ದಲ್ಲಿ ಹೊಸದಾಗಿ ಪರಿಚಯವಾದ ಸುತ್ತಮುತ್ತಲಿನ ವ್ಯಕ್ತಿಗಳನ್ನು ಕೇಳುತ್ತೇವೆ ಮತ್ತು ಅವರ ಸಲಹೆಯನ್ನು ಪಾಲಿಸುತ್ತೇವೆ ಕೂಡ. ತದನಂತರ ಕೆಲವೊಮ್ಮೆ ಅಯ್ಯೋ... ಅವರ ಮಾತು ಕೇಳಬಾರದಿತ್ತು ಅಂತ ಪೇಚಾಡುವ ಪ್ರಸಂಗ ಸಹ ನೋಡಿರುತ್ತೇವೆ. ಆದರೆ ನಮಗೆ ಬಾಲ್ಯದಿಂದ ನಿಸ್ವಾರ್ಥವಾಗಿ ಕಲಿಸಿದ ಒಬ್ಬ ಗುರುವಿನ ಸಲಹೆ ಪಡೆಯೋಣ ಎಂಬ ಕನಿಷ್ಠ ಮನೋಭಾವನೆ ಬರುವುದಿಲ್ಲ.
.
ಗುರುಗಳ ಸಲಹೆ, ಮಾರ್ಗದರ್ಶನ ಪಡೆಯದಿದ್ದರೆ ಬಿಡಿ; ಅಪರೂಪಕ್ಕಾದರೂ ನಮಗಿಷ್ಟವೆನಿಸಿದ್ದ ಗುರುವಿಗೆ ಕರೆ ಮಾಡಿ "ಹೇಗಿದ್ದೀರಾ ಸರ್ / ಮೇಡಂ...?" ಎಂದು ಕೇಳುವ ಕನಿಷ್ಠ ಸೌಜನ್ಯವೂ ನಮಗಿಲ್ಲವಾಗಿದೆ.
.
ಅಲ್ಲಿ ಇಲ್ಲಿ ಪರಿಚಯವಾದ ಅಥವಾ ನೆರೆಹೊರೆಯ ವ್ಯಕ್ತಿಗಳ ಜೊತೆ ರಕ್ತ ಸಂಬಂದಿಗಳಿಗಿಂತ ಹೆಚ್ಚಿನ ತರ ಯಾವಾಗಲೂ ಒಡನಾಟ ಇಟ್ಟುಕೊಳ್ಳುತ್ತೇವೆ, ಸಂಪೂರ್ಣ ನಂಬುತ್ತೇವೆ, ಅವರಿಗೆ ಕಷ್ಟ ಎಂದಾಗ ಹಗಲು-ರಾತ್ರಿ ಬಿಸಿಲು-ಮಳೆ-ಗಾಳಿ-ಚಳಿ ಎನ್ನದೆ ಎದ್ದು ಬಿದ್ದು ಓಡಾಡುತ್ತೇವೆ, ಕೈಲಾದ ಸಹಾಯ ಮಾಡುತ್ತೇವೆ, ಮುಗಿಬಿದ್ದು ಅವರ ಹುಟ್ಟು ಹಬ್ಬ ಆಚರಿಸುತ್ತೇವೆ, ಹಬ್ಬ-ಹರಿದಿನಗಳಲ್ಲಿ ತಪ್ಪದೆ ಶುಭಾಶಯ ಕೋರುತ್ತೇವೆ, ಸುಮ್ ಸುಮ್ನೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತೇವೆ. 
.
ಎಲ್ಲೋ ಪರಿಚಯವಾದ ಮೂರನೇ ವ್ಯಕ್ತಿಗೆ ತೋರುವ ಪ್ರೀತಿ, ಕಾಳಜಿ, ಕನಿಕರ, ಉದಾರತೆ ನಮ್ಮ ಜೀವನ ರೂಪಿಸಿಕೊಳ್ಳಲು ಕಾರಣಿಕೃತರಾದ ಗುರುಗಳ ಬಗ್ಗೆ ತೋರುವುದಿಲ್ಲವೇಕೆ? ವಿದ್ಯಾರ್ಥಿ ಜೀನನದ ನಂತರ ಶಿಕ್ಷಕರು ನನಗೆ ಅಸಂಬದ್ಧವೆಂಬಂತೆ ಗುರು-ಶಿಷ್ಯ ಸಂಬಂಧ ಸಂಪೂರ್ಣವಾಗಿ ಕಡೆದುಕೊಳ್ಳುತ್ತೇವೆ. ನಮ್ಮ ಮೇಷ್ಟ್ರು/ಮೇಡಂ ಗಳು ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಕನಿಷ್ಠ ಆಲೋಚನೆಯೂ ಬರುವುದಿಲ್ಲ.

ಹೊಸ ಪರಿಚಯದ ಆ ಮೂರನೇ ವ್ಯಕ್ತಿ ನಿಮ್ಮ ಬದುಕಿನಲ್ಲಿ ಮುಂದೆ ಎಲ್ಲೋ ಒಂದು ಕಡೆ ಉಪಯೋಗ ಆಗಬಹುದು ಎಂಬ ಸ್ವಾರ್ಥ ಮನೋಭಾವ ಇರುವುದಾದರೆ ಇರಲಿ, ಅದು ಪ್ರತಿಯೊಬ್ಬ ಮನುಷ್ಯನ ಸಹಜ-ಗುಣವೆ. ಆದರೆ, ಶಿಕ್ಷಕರಿಂದ ಮುಂದೆ ನನಗೇನು ಲಾಭವಿಲ್ಲ ಎಂಬ ಕೆಟ್ಟ ಕಲ್ಪನೆ ನಮಗರಿಯದೆ ಮನಸ್ಸಿನಲ್ಲಿ ಇರುವುದಾದರೆ ಅಥವಾ, ಶಿಕ್ಷಕರ ಬಗೆಗಿನ ತಾಸಾರ ಮನೋಭಾವ ಇದ್ದರೆ ಖಂಡಿತವಾಗಿಯೂ ಅದು ನಾವು ಮಾಡುವ ದ್ರೋಹವೆ.
.
ಕೆಲವರು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ ತನಗೆ ವಿಧ್ಯೆ ಕಲಿಸಿದ ಯಾವೊಬ್ಬ ಗುರುವಿನ ಸಂಪರ್ಕ ಮಾಡಿ ಧನ್ಯತೆಯ ಕೃತಜ್ಞತೆ ತಿಳಿಸುವುದಿಲ್ಲ. ಇಂತಹ ಮನಸ್ಥಿತಿಯ ವಿದ್ಯಾರ್ಥಿಗಳನ್ನು ನೋಡಿಯೇ ಕೆಲವು ಶಿಕ್ಷಕರು ಹೇಳುತ್ತಾರೆ "ಶಿಕ್ಷಕ ವೃತ್ತಿ ಅಭಿನಂದನೀಯವಲ್ಲದ ಕೆಲಸ" ಎಂದು.
.
ಅದೇ ಗುರುವಿಗೆ ತಾನು ಕಲಿಸಿದ ಹಳೆಯ ವಿದ್ಯಾರ್ಥಿ ಅಪರೂಪಕ್ಕೆ ಸಿಕ್ಕರೆ ಮನತುಂಬಿ ಮಾತನಾಡಿ, ಅವನ ತರಗತಿಯ ಬೇರೆಲ್ಲಾ ಸಹಪಾಠಿಗಳ ಬಗ್ಗೆ ವಿಚಾರಿಸುತ್ತಾರೆ. ಇಷ್ಟು ವರ್ಷಗಳಲ್ಲಿ ಒಂದು ಬಾರಿಯೂ ಹೇಗಿದ್ದೀರಾ ಸರ್ ಅಂತ ವಿಚಾರಿಸಿಲ್ಲವೇಕೆ ಎಂದು ನಿಮ್ಮನ್ನು ದಂಡಿಸುವುದಿಲ್ಲ. ಬದಲಾಗಿ, ಜೀವನದಲ್ಲಿ ಹೇಗೋ ಚೆನ್ನಾಗಿದ್ದೀಯನಪ್ಪ... ಅಷ್ಟು ಸಾಕು ಹೋಗು... ನಿನ್ನ ನೋಡಿ ಖುಷಿಯಾಯ್ತು... ಚೆನ್ನಾಗಿರು... ಅಂತ ಹೇಳಿ ಆಶೀರ್ವದಿಸಿ ಕಳುಹಿಸುತ್ತಾರೆ.
.
ಪಠ್ಯ ಶಿಕ್ಷಣ ನಮ್ಮ ಹಕ್ಕುಬಾಧ್ಯತೆ ಸರಿ. ಆದರೆ ಸಾಮಾಜಿಕ ಶಿಕ್ಷಣ ತಿಳಿಯಪಡಿಸುವರಾರು? ಪೋಷಕರು ಸಹ ಮಕ್ಕಳಿಗೆ ಗುರುಗಳ ಮಹತ್ವ ಹೇಳುವುದಿಲ್ಲ. ಮಕ್ಕಳು ಸಂದಿಗ್ನ ಪರಿಸ್ಥಿಯಲ್ಲಿ ಇದ್ದಾಗ ನಿನ್ನ ಮೇಷ್ಟ್ರು ಅಥವಾ ಮೇಡಂ ನ ಸಲಹೆ ಕೇಳು ಅಂತ ಹೇಳುವುದಿಲ್ಲ, ಬದಲಾಗಿ ನಿನ್ನ ಫ್ರೆಂಡ್ಸ್ ನ ಅಥವಾ ಬೇರೆ ಯಾರನ್ನೋ ಕೇಳು ಅನ್ನೋದು ಸಹಜವಾಗಿ ಕೆಳಬರುತ್ತೆ.
.
ನನಗೆ ದೈವ ಸಮಾನರಾದ ನನ್ನ ನೆಚ್ಚಿನ ನಾಗೇಶ್ ಮೇಷ್ಟ್ರು ಮತ್ತು ಅವರ ಮಡದಿ ನನ್ನ ಪ್ರೀತಿಯ ಅಕ್ಕ ನನಗೆ ತಾಯಿ ಸಮಾನವೇ. ಇವರ ನಿರಂತರ ಸಲಹೆ, ಮಾರ್ಗದರ್ಶನ ಮತ್ತು ಆಶೀರ್ವಾದ ನನ್ನ ಜೀವನದ ಪ್ರತೀ ಹೆಜ್ಜೆ ಹೆಜ್ಜೆಯಲ್ಲೂ ಬೆಂಗಾವಲಾಗಿ ಕಾಯುತ್ತಿರುವುದಂತೂ ಸತ್ಯ.
..
"ಅ" ಕಾರ ಕಲಿಸಿದ ಗುರು ತನ್ನ ಶಿಷ್ಯರಿಂದ 'ಅ'ನುಕೂಲ ಬಯಸುವುದಿಲ್ಲ, ಚೆನ್ನಾಗಿರು ಎಂದು  'ಆ'ಶೀರ್ವದಿಸುತ್ತಾರೆ.
.
ಸಂಬಂಧಿಗಳು, ಗೆಳೆಯರು, ನೆರೆ ಹೊರೆಯ ವ್ಯಕ್ತಿಗಳು ಹೀಗೆ ಹಲವಾರು ಜನ ಒಬ್ಬರಿಗೊಬ್ಬರು ಸಹಾಯ ಕೇಳಿರುತ್ತಾರೆ, ಕೈಲಾದ ಸಹಾಯ ಮಾಡಿರುತ್ತೀರಿ, ಕೆಲವೊಮ್ಮೆ ಸಹಾಯ ಮಾಡಿ ಮೋಸ ಹೋಗಿರುತ್ತೀರಿ - ಸಮಾಜದಲ್ಲಿ ಇವೆಲ್ಲವೂ ಸರ್ವೇ ಸಾಮಾನ್ಯ.
.
ಹಾಗೆ ಯೋಚಿಸಿ ನೋಡಿ, ಯಾವುದೇ ಶಿಕ್ಷಕರು ತನ್ನ ಶಿಷ್ಯರಿಂದ ಸಹಾಯ ಬಯಸಿರುವುದನ್ನ ನೋಡಿದ್ದೀರಾ ಅಥವಾ ಕೇಳಿದ್ದೀರಾ? ಇಲ್ಲ... ಸಾಮಾನ್ಯವಾಗಿ ಕಾಣಸಿಗುವುದಿಲ್ಲ. ಗುರುಗಳು ಶಿಷ್ಯರಿಂದ ಯಾವತ್ತಿಗೂ ಸಹಾಯ ಬಯಸುವುದಿಲ್ಲ. ತನ್ನ ಶಿಷ್ಯ ಉನ್ನತ ಮಟ್ಟದಲ್ಲಿ ಬೆಳೆದಿರುವುದನ್ನ ಕೇಳಿದರೆ ಅಥವಾ ಜೀವನದ ಹಲವಾರು ಜಂಜಾಟಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾನೆ ಎಂಬುದನ್ನು ಕಂಡರೆ ಆ ಗುರುವಿಗೆ ತನ್ನ ವೃತ್ತಿ ಜೀವನದ ಸಾರ್ಥಕತೆ ಅನ್ನಿಸುತ್ತೆ.
.
ತಾವು ಜೀವನದ ಯಾವುದೇ ಸ್ಥಿತಿಯಲ್ಲಿ ಇರಲಿ, ಅಪರೂಪಕ್ಕೆ ತನ್ನ ನೆಚ್ಚಿನ ಗುರುವಿಗೊಂದು ಕರೆ ಮಾಡಿ ಕುಶಲೋಪರಿ ವಿಚಾರಿಸಿ, ತಾವು ಜೀವನ ರೂಪಿಸಿಕೊಂಡಿರುವ ಬಗ್ಗೆ ಹೇಳಿಕೊಂಡು ಧನ್ಯತೆಯಿಂದ ಕೃತಜ್ಞತೆ ತಿಳಿಸಿ. ಆ ಗುರುಗಳು ಸಂತೋಷದಿಂದ ಮನತುಂಬಿ ಆಶೀರ್ವದಿಸುತ್ತಾರೆ, ಹಾಗೆಯ ಗುರುಗಳಿಗೆ ಅವರ ಶಿಕ್ಷಣ ವೃತ್ತಿ ಅಭಿನಂದನೀಯ ಕೆಲಸ ಎಂದನಿಸಿ ಸಾರ್ಥಕತೆಯ ಭಾವ ಮೂಡುತ್ತದೆ. ಏಕೆಂದರೆ ಪ್ರತಿಯೊಬ್ಬ ಗುರುವಿನ ಶಿಕ್ಷಣ ವೃತ್ತಿ ನಿಸ್ವಾರ್ಥ ಸೇವೆಯ ಮಾದರಿ..!

- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060             

Comments

  1. ಜೀವನದಲ್ಲಿ ಬರುವ ಪ್ರತಿಯೊಬ್ಬರೂ ಗುರುಗಳೇ! ಶಾಲೆಯಲ್ಲಿ ಗುರುಗಳು ಪಠ್ಯ ಹಾಗೂ ಮುಂಬರುವ ಜೀವನ ಹೇಳಿಕೊಟ್ಟರೆ , ಸಂಬಂಧಿಗಳು, ಗೆಳೆಯರು, ನೆರೆ ಹೊರೆಯ ವ್ಯಕ್ತಿಗಳು ನಿಜವಾದ ಜೀವನದ ಪಾಠ ಹೇಳಿಕೊಡುತ್ತಾರೆ! ಮನುಷ್ಯ ಯಾವಾಗಲೂ ಎಲ್ಲರಿಗೂ ಶಿಷ್ಯನೇ. ಎಲ್ಲರಿಂದಲು ಕಲಿಯುವ ವಿಷಯ ಇರುತ್ತದೆ!

    ReplyDelete
    Replies
    1. ನಿಜ. ಆದರೆ ಶಾಲೆಯಲ್ಲಿ ಕಲಿಸಿದ ಗುರುಗಳ ಸಂಪರ್ಕವೇ ಕಡಿದುಕೊಳ್ಳಬಾರದು ಅಲ್ವಾ... ಕೃತಜ್ಞತೆಗಾದರೂ ಒಮ್ಮೆ ಗುರುಗಳನ್ನು ಮಾತನಾಡಿಸಿಬಹುದು ಅಲ್ಲವೇ.

      Delete
  2. ನಿಜ ಜೀವನದಲ್ಲಿ ಗುರಿ ಮತ್ತು ಗುರು ಎರಡೂ ಅತೀ ಮುಖ್ಯ. ಗುರು ಒಲಿದರೆ ಆ ಹರ(ಶಿವ) ಒಲಿದಂತೆ ಅನ್ನೊ ಮಾತು ನೆನಪಾಗುತ್ತೆ..ನಿಮ್ಮ ಲೇಖನ ಮನ ಮುಟ್ಟುವಂತೆ ಇದೆ..ನನಗೂ ನನ್ನ ಎಲ್ಲ ಗುರುಗಳ ನೆನಪಾಯಿತು.

    ReplyDelete
  3. ನಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರು ಬುದ್ಧಿವಂತರನ್ನಾಗಿ ಮಾಡುವ ಕಲೆ ನಮ್ಮ ಗುರಗಳದ್ದಾಗಿದೆ. ಹಸಿಮಣ್ಣಿಗೆ ಆಕಾರ ಕೊಡುವ ಗುರು ಎಂಬ ಮಾರ್ಗದರ್ಶಿ ತಂದೆ ತಾಯಿಯ ಸ್ಥಾನಕ್ಕೆ ಸಮಾನರು. ಜ್ಞಾನ ಎಂಬ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಈ ಮಹಾನುಭಾವರಾದ ಗುರುಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವವರಲ್ಲಿ ಪ್ರಮುಖರಾಗಿದ್ದಾರೆ. ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರು ಬುದ್ಧಿವಂತರನ್ನಾಗಿ ಮಾಡುವ ಕಲೆ ನಮ್ಮ ಗುರಗಳದ್ದಾಗಿದೆ. ಹಸಿಮಣ್ಣಿಗೆ ಆಕಾರ ಕೊಡುವ ಗುರು ಎಂಬ ಮಾರ್ಗದರ್ಶಿ ತಂದೆ ತಾಯಿಯ ಸ್ಥಾನಕ್ಕೆ ಸಮಾನರು. ಜ್ಞಾನ ಎಂಬ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಈ ಮಹಾನುಭಾವರಾದ ಗುರುಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವವರಲ್ಲಿ ಪ್ರಮುಖರಾಗಿದ್ದಾರೆ.
    ಇಂತಹ ಗುರುಗಳ ಬಗ್ಗೆ ಮನಸ್ಸಿಗೆ ಮುಟ್ಟುವಂತೆ ಇದೆ ನಿಮ್ಮ ಈ ಲೇಖನ

    ReplyDelete
  4. Comment From Lokesh in Facebook:

    ಸರಿಯಾಗಿ ನೆನಪಿದೆ ನನಗೆ " ಬಾರು ಕೋಲಿನಲಿ ಬಿಸಿ ಬಿಸಿ ಕಜ್ಜಾಯ ತಿಂದ ನೆನಪು , ನಾಗೇಶ್ ಮೇಷ್ಟ್ರ ಮನೆಗೆ ಬೋರ್ ವೆಲ್ ನಿಂದ ನೀರು ಒತ್ತಿ ಒತ್ತಿ ನೀರು ತುಂಬಿಸಿದ ನೆನಪು, ಶಂಕರಣ್ಣನ ಅಂಗಡಿ ಯಿಂದ ದಿನಸಿ ತಂದು ಕೊಡುತಿದ್ದ ನೆನಪು,ಗೌಡರ ತೋಟಗಳಿಗೆ ಹೋಗಿ ತರಕಾರಿ ಕಿತ್ತು ತಂದು ಕೊಡುತ್ತಿದ್ದ ನೆನಪು,ರಜೆ ಯಲ್ಲಿ ಕೊಟ್ಟ ರಾಶಿ ರಾಶಿ ಹೋಮ್ ವರ್ಕ್ ಗೆ ನೋಟ್ ಬುಕ್ ಸಾಲದೆ ಬಿಡಿ ಹಾಳೆಗಳ ಒಟ್ಟು ಮಾಡಿ ಸೊಣ್ಣೆ ಮರದ ಕಾಯಿಯ ಅಂಟು ಹಾಕಿ ಮಾಡಿದ ಹೋಮ್ ಮೆಡ್ ನೋಟ್ ಬುಕ್, ಸರಿಯಾಗಿ ನೆನಪಿದೆ ನನಗೆ

    ReplyDelete
  5. Comment from Naveen Gowda in Facebook:

    ನನ್ನ ನೆಚ್ಚಿನ ನನ್ನ ಮೊದಲ ಗುರುಗಳು ಲವ್ ಯು ಸರ್

    ReplyDelete
  6. Comment from BaccheGowda in Facebook:

    ತುಂಬಾ ದಿನವಾಗಿತ್ತು ನಾಗೇಶ್ ಮೇಷ್ಟ್ರು ನೋಡಿ
    ಈಗ ನೋಡಿ ಆನಂದವಾಯಿತು.
    ಗುರುವಿಷ್ಣು ಗುರುದೇವೋ ಭಾ ಸಾಕ್ಷತ್ ಪರ ಬ್ರಹ್ಮ.

    ReplyDelete
  7. ರಾಘು ನಿಮ್ಮ ಬರವಣಿಗೆಯಿಂದ ಕಳೆದು ಹೋದ ನಮ್ಮ ಮಾಸ್ತರರು ನೆನಪಾಗಿ ಆ ಕ್ಷಣಗಳು ಮರುಕಳಿಸಿದವು.

    ReplyDelete
  8. True, while reading this article remembered all my teachers. Thanks for the article.

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ