Thank you ನನ್ನ ಹೃದಯ..!
ಕುದುರೆಮುಖ ಚಾರಣ (trekking) ಮಾಡಲು ಉಮ್ಮಸ್ಸಿನಿಂದ ಹೊರಟು, ಹಲವು ಬೆಟ್ಟಗಳ ನಡುವೆ ಒಂದೆರಡು ಕಡಿದಾದ ಬೆಟ್ಟಗಳನ್ನು ಏರುವಷ್ಟರಲ್ಲಿ ಎದೆ ಬಡಿತ ಜೋರಾಗಿ, ಜೀವ ಕೈಗೆ ಬಂದ ಅನುಭವ. ಸುಮಾರು 5 km ದೂರ ಸಾಗಿ "ಒಂಟಿ-ಮರ"ದಡಿ ಬುಸುಗುಟ್ಟುತ್ತ ಕುಳಿತು ವಿಶ್ರಮಿಸುವಾಗ, ಇನ್ನು ಕೇವಲ 6km ಮಾತ್ರ ಬಾಕಿಯಿದೆ ಎಂದು ಮಾರ್ಗದರ್ಶಕ ವೆಂಕಟೇಶ್ ಹೇಳಿದರು. ತಕ್ಷಣ "ಯಪ್ಪಾ ಆಗೋದಿಲ್ಲ, ವಾಪಸ್ ಹೋಗೋಣ" ಅಂತ ಪುಟ್ಟ ❤ ಹೃದಯ ಕೇಳಿತು. ಆದರೆ, ಹಚ್ಚಸಿರ ಹೊದಿಕೆಯ ಕುದುರೆಮುಖ ಬೆಟ್ಟವನ್ನು ನೋಡಿದ ಮನಸ್ಸು💞ಹೃದಯಕ್ಕೆ ಸಾಂತ್ವನ ಹೇಳಿತೋ ಏನೋ, ಸ್ವಲ್ಪ ಹೊತ್ತು ವಿಶ್ರಮಿಸಿ ಚಾರಣ ಮುಂದುವರೆಸಲು ಸಹಕರಿಸಿತು ಹೃದಯ.
Up & Down ಕೇವಲ 5km ಅಷ್ಟೇ ಇರೋದು, ಬಹಳ ಸುಲಭ ಇದೆ ಅಂತ ಸುಳ್ಳು ಹೇಳಿ ಕರೆದೊಯ್ದಿದ್ದ ಗೆಳೆಯರು. ಪ್ರತೀ ಬಾರಿ ದಣಿವಾದಾಗ ಅವರಿಗೆ ಪ್ರೀತಿಯ ಬೈಗುಳ, ಒಂದಿಷ್ಟು ತಮಾಷೆ, ಕೀಟಲೆ, ಜೋರಾಗಿ ನಗಲು ಯಾರಿಗೂ ಶಕ್ತಿಯಿಲ್ಲ. ಅಲ್ಲಲ್ಲಿ ಸಿಗುವ ಪುಟ್ಟ ಹೊಳೆಯಲ್ಲಿ ದಣಿದ ದೇಹಕ್ಕೆ ತಂಪು. ಹೇಗೋ ಸಂಭಾಳಿಸಿ ಕುದುರೆ ಬೆಟ್ಟದ ಬೆನ್ನಿನ ಮೇಲೆ ಏರಿದ ಕೂಡಲೇ ಮೇಘಗಳಿಂದ ಅದ್ದೂರಿ ಸ್ವಾಗತ. ಆ ದೈತ್ಯ ಕುದುರೆಯ ಬೆನ್ನಿನ ಭಾಗದಿಂದ ಮುಖದ ಕಡೆ ಸವಾರಿ ಮೋಡಗಳ ಜೊತೆಯಲ್ಲೇ ಸಾಗಿತು. ದೇಹ ದಂಡಿಸಿ ಕುದುರೆಮುಖ ಶಿಖರದ ತುತ್ತದಿಯಲ್ಲಿ ನಿಂತರೆ ಸ್ವರ್ಗದಲ್ಲಿ ತೇಲಾಡುವಂತೆ ಭಾಸವಾಯಿತು. ಮೇಘರಾಜ ಗುಂಪು ಗುಂಪಾಗಿ ಬಂದು ಕುದುರೆ ಮುಖಕ್ಕೆ ಚುಂಬಿಸಿ, ನಮ್ಮನ್ನು ಬಾಚಿಕೊಂಡು ಹೋಗುತ್ತಿದ್ದಾನೆ ಎಂಬನುಭವ. ಹಾದು ಹೋಗುವ ಮೋಡಗಳ ಮದ್ಯೆ ಕುಳಿತು ರಾಜುಗೌಡರ ಹೋಂ ಸ್ಟೇ ಯವರು ಕೊಟ್ಟಿದ್ದ ಪುಳಿಯೋಗರೆ ತಿನ್ನುತ್ತಿದ್ದರೆ ಸ್ವರ್ಗ ಲೋಕವೇ ಅನ್ನಿಸುತ್ತಿತ್ತು.
ಒಟ್ಟು 22km ಚಾರಣ ಮಾಡಿ ಈ ಪುಟ್ಟ ಹೃದಯಕ್ಕೆ ಎಷ್ಟು ನೋವು ಕೊಡಬಹುದೊ ಅಷ್ಟು ಕೊಟ್ಟಾಗಿತ್ತು. ಮನಸ್ಸಿಗೆ ಇಂತಹ ಅದ್ಭುತ ಮನಮೋಹಕ ಕ್ಷಣ ಅನುಭವಿಸಲು ಸಹಕಾರ ನೀಡಿದ ಪುಟ್ಟ ಹೃದಯಕ್ಕೆ "Thank You ನನ್ನ ❤ ಹೃದಯ..!" ಅಂತ ಮನಸ್ಸು ಹೇಳಿರಲೇಬೇಕು ಅನ್ನಿಸುತ್ತೆ.
ರಾಘವೇಂದ್ರ. ಜಿ. ಶ್ರೀರಾಮಯ್ಯ
anisike-abhipraya.com 9060660060

Comments
Post a Comment
ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ