ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!


ಬಹಳ ಚಿರಪರಿಚಿತ ಇರುವ ಒಬ್ಬ ವಿದ್ಯಾವಂತ ವ್ಯಕ್ತಿ ನನಗೆ ಹೇಳಿದ ಮಾತು - "ರಾಘು, ಸುಮಾರು 70 ವರ್ಷಗಳಿಂದ ದೇಶದ ರೈತರು ಬಡವರಾಗಿಯೇ ಉಳಿದಿದ್ದಾರೆ. ಎಷ್ಟೊಂದು ರೈತರು ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾರೆ. ಕೇಂದ್ರ ಸರ್ಕಾರದ ಈ ಹೊಸ ಕಾಯ್ದೆಗಳು ಜಾರಿ ಆದ ಮೇಲೆ ರೈತರ ಜೀವನವೇ ಬದಲಾಗಿ ಬಿಡುತ್ತೆ, ಗೊತ್ತಾ..." ಎಂದರು.
ಕಣ್ಣು ಉಬ್ಬೇರಿಸಿ... ಮುಗುಳ್ನಕ್ಕಿ ಸುಮ್ಮನಾದೆ. ಏಕೆಂದರೆ ಈತನೂ ಸಹ __ __ಯವರ ಅಂಧ-ಭಕ್ತ. ಈ ಕೆಲ ಅಂಧ-ಭಕ್ತರ ಕಣ್ಣಿಗೆ ತಮ್ಮ ಪಕ್ಷದ ರಾಜಕಾರಣಿಗಳು ಯಾವುದೇ ಕಾಯ್ದೆ/ಕಾನೂನು ತಂದರು ಎಲ್ಲವೂ ನೂರಕ್ಕೆ ನೂರರಷ್ಟು ಸರಿಯೇ ಇರುತ್ತೆ, ಇದನ್ನ ಒಪ್ಪದಿದ್ದವರೆಲ್ಲ "ನಕಲಿ ರೈತರು" ಅಥವಾ "ವಿರೋಧ ಪಕ್ಷದವರು" ಎಂಬ ಭಾವನೆ ಅವರದಿರುತ್ತೆ.

ಬಾಲ್ಯದ ನೆನಪು - ನಮ್ಮ ತೋಟದಲ್ಲಿ ಬೆಳೆಯುತ್ತಿದ್ದ ತರಕಾರಿಗಳನ್ನ ಬೆಳಿಗ್ಗೆಯಿಂದ ಸಂಜೆಯವರೆಗೆ ಕಿತ್ತು ಮೂಟೆಗಳಲ್ಲಿ ತುಂಬಿ ಸಂಜೆ 6-7 ಗಂಟೆ ಅಷ್ಟರಲ್ಲಿ ಒಂದು ಟೆಂಪೋ ದಲ್ಲಿ ತುಂಬಿಕೊಂಡು ನಮ್ಮ ಹೆಮ್ಮೆಯ ಬೆಂಗಳೂರಿನ ಲಾಲ್-ಬಾಗ್ ಮಾರುಕಟ್ಟೆಗೆ ಹಾಕ್ಕೊಂಡು ಬರುತ್ತಿದ್ದೆವು. ಕೆಲವೊಮ್ಮೆ ಹಠಮಾಡಿ ಜೊತೆಯಲ್ಲಿ ನಾನು ಹೋಗುತ್ತಿದ್ದೆ. ಆ ತರಕಾರಿ ಮೂಟೆಗಳ ಮೇಲೆ ಕುಳಿತು/ಮಲಗಿಕೊಂಡು, ಅರ್ಧ ದಾರಿಯಲ್ಲಿ ಯಾವುದಾರು ಒಂದು ಧಾಬಾ ದಲ್ಲಿ ಊಟ ಮಾಡಿ, ಮತ್ತೆ ಮಧ್ಯ ರಾತ್ರಿ ಲಾಲ್-ಬಾಗ್ ಸಮೀಪ ಸರ್ಕಲ್ ನಲ್ಲಿ ಟೀ-ಬನ್ನು ತಿನ್ನುತ್ತಾ ಕಾಲ ಕಳೆಯೋದು ಅಂದರೆ ಮಸ್ತ್ ಮಜಾ ಅನ್ನಿಸ್ತಾ ಇತ್ತು👌.

ಮತ್ತೆ, ಬೆಳಿಗಿನ ಜಾವ 5.30 ರೊಳಗೆ ನಮ್ಮ ಎಲ್ಲಾ ತರಕಾರಿ ಮೂಟೆಗಳನ್ನ ಹರಾಜು ಕೂಗಿ ದಿನ-ವ್ಯಾಪಾರಿಗಳು 'ಮಂಡಿ'ಯವರ ಮೂಲಕ ಕೊಂಡುಕೊಳ್ಳುತ್ತಿದ್ದರು. ನಂತರ 'ಮಂಡಿ'ಯವರು ಸ್ವಲ್ಪ ಪ್ರಾಮಾಣದ ಕಮಿಷನ್ ಹಿಡಿದು ನಮ್ಮ ದುಡ್ಡು ಕೊಡುತ್ತಿದ್ದರು. ಬೆಳ್ಳಿಗೆ 10 ಗಂಟೆಯೊಳಗೆ ಊರಿಗೆ ಬಸ್ಸಿನಲ್ಲಿ ವಾಪಸ್ ಬಂದು ತೋಟದ ಕೆಲಸ ಎಂದಿನಂತೆ ನಡೆಯುತ್ತಿತ್ತು.

ಮೇಲಿನ ನೈಜ ಪ್ರಸಂಗ ಹೇಳುವ ಮೂಲಕ "ಸಣ್ಣ-ಇಳುವರಿ ರೈತರ" ಜೀನವ ಹೀಗಿರುತ್ತೆ ಎಂಬುದರ ಪರಿಚಯ ಮಾಡಿಸಿದ್ದೇನೆ ಅಷ್ಟೇ.

ಈ ಹೊಸ ಕೃಷಿ ಕಾಯ್ದೆಗಳಲ್ಲಿ ಒಂದಿಷ್ಟು ಚೆನ್ನಾಗಿವೆ, ಆದರೆ ಕೆಲವೊಂದು ಕಾಯ್ದೆಗಳು ಸಣ್ಣ-ಇಳುವರಿ ಮಾಡುವ ರೈತರ ಪಾಲಿಗೆ ಮಾರಕವಾಗೋದು ಕಟು ಸತ್ಯ. 

ಹೌದು, ನಾನು ಒಪ್ಪುತ್ತೇನೆ - ಯಾವುದೇ ಸರ್ಕಾರವು ಹೊಸ ಕಾಯ್ದೆಗಳು ತರುವ ಮುನ್ನ ನುರಿತ ತಜ್ಞರ ಜೊತೆ ಕೂಲಂಕುಷವಾಗಿ ಸಮಾಲೋಚನೆ ಮಾಡಿಯೇ ನಿರ್ಧಾರ ಮಾಡಿರುತ್ತಾರೆ. ಹಾಗಂದ ಮಾತ್ರಕ್ಕೆ ಯಾವುದೇ ಲೋಪಗಳು ಇರೋದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ರೈತರಿಗೆ ಮಾರಕವಾಗಬಹುದು ಎಂಬುವ ಕಾಯ್ದೆಗಳು ತಿದ್ದುಪಡಿ ಮಾಡಲೇಬೇಕು. ಆದರೆ ನಮ್ಮ ಕೇಂದ್ರ ಸರ್ಕಾರವು ಮೊಂಡಿಗೆ ಬಿದ್ದಂತೆ ಕಾಣುತ್ತಿದೆ.

ಕಾಯ್ದೆಗಳು ತಿದ್ದುಪಡಿ ಇಲ್ಲದೆ ಯಥಾವತ್ತಾಗಿ ಜಾರಿಯಾದರೆ ಇನ್ನು ಕೆಲವೇ ವರ್ಷಗಳಿಂದ ಸಣ್ಣ-ಇಳುವರಿ ರೈತರ ಕಥೆ ಮುಗಿದಂತೆ ಎಂಬುದು ನನ್ನ ಅನಿಸಿಕೆ.

ದೇಶದಲ್ಲಿ 90% ಸಣ್ಣ-ಇಳುವರಿ ರೈತರೇ ಇದ್ದಾರೆ, ಇವರು ಶ್ರೀಮಂತರಾಗಲು ಸಾಧ್ಯವೇ ಇಲ್ಲ. ಹಾಗೆಯೇ, ಈ ಶ್ರಮಿಕ ರೈತರು ತಮ್ಮ ಜಮೀನು ಮಾರಿಕೊಂಡು ಶ್ರೀಮಂತರಾಗಲು ಎಂದಿಗೂ ಬಯಸುವುದಿಲ್ಲ.

ಆದರೆ, ತಮ್ಮದೇ ಆದ ಜೀವನ ಕಟ್ಟಿಕೊಂಡು ಸ್ವಾಭಿಮಾನದಿಂದ ನೆಮ್ಮದಿಯ ಬದುಕು ಸಾಗಿಸಬೇಕು ಅಂತಷ್ಟೇ ಬಯಸುತ್ತಾರೆ.

ಏನೋ ಮಾಡಲು ಹೋಗಿ ಇನ್ನೇನೋ ಮಾಡಿದಂತೆ; ಬಡ ರೈತರ ಜುಟ್ಟು ಯಾವುದೋ ಸಂಸ್ಥೆಗಳ ಕೈಗೆ ಕೊಡಬಾರದು.

ಸ್ವಾವಲಂಬಿ ಜೀವನ ನಡೆಸುತ್ತಿರುವ ರೈತರ ಜೀವನದಲ್ಲಿ ಕಡ್ಡಿ ಅಲ್ಲಾಡಿಸದೆ, ವಾಸ್ತವಿಕತೆ ಅರಿತು ಸುಧಾರಣೆಗೆ ಏನು ಬೇಕೋ ಅದನ್ನ ಮಾತ್ರ ಮಾಡಿದರೆ ಸಾಕು ಎಂಬುದು ನನ್ನ ಅಭಿಪ್ರಾಯ.

- ರಾಘವೇಂದ್ರ. ಜಿ. ಶ್ರೀರಾಮಯ್ಯ
 9060660060             




Comments

  1. And now anybody can buy farm land in Karnataka, no restriction. Many small farmers might sell land for some instant money due to sudden appreciation of price and later regret. All the land will be in rich hands who will lease the farm to same poor farmers. These farmers will be laborers now.

    Everything controlled by big corporations.

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಪ್ಪಾ... Ex-MP ಎಂದರೇನು?

ಅಸಲಿ ರೈತ, ನಕಲಿ ಪ್ರೀತಿ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?